ಬಹುತೇಕ ಎಲ್ಲಾ ಸಮಸ್ಸೆಗಳಿಗೆ ನಾವೇ ಕಾರಣ ಕರ್ತರಾಗಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಮತದಾರನು ನಿಜವಾದ ಪ್ರಭು. ಈ ಮಾತನ್ನು ಸಂತೋಷಕ್ಕೋಸ್ಕರ ಅಥವಾ ನಮ್ಮ ನೆಮ್ಮದಿಗೋಸ್ಕರ ನಾವೇ ಹೇಳಿ ಕೊಳ್ಳಬೇಕು. ಈ ದೇಶದ ಪ್ರಜಾಪ್ರಭುತ್ವದಲ್ಲಿ ಪ್ರಜೆಯಾದವನಿಗೆ ಕವಡೆ ಕಾಸಿನಷ್ಟು ಕಿಮ್ಮತ್ತಿಲ್ಲ. ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಚುನಾವಣೆಗಳು ಹತ್ತಿರವಾದಾಗ ಜನರು ಅವರ ಕಣ್ಣಿಗೆ ಬೀಳುತ್ತಾರೆ. ಆ ಸಮಯದಲ್ಲಿ ಪ್ರಜೆಗಳಿಗೆ ಏನಿಲ್ಲದ ವಾಗ್ದಾನ ಆಶ್ವಾಸನೆಗಳನ್ನು ನೀಡಿ ಅವನನ್ನು ಮರಳು ಮಾಡುತ್ತಾರೆ. ಅದರಲ್ಲಿಯೂ ನಡೆಯುವ ಎಲ್ಲಾ ಚುನಾವಣೆಗಳು ಜಾತಿ ಆಧಾರದ ಮೇಲೆ ನಡೆಯುತ್ತವೆ. ಎಲ್ಲಾ ರಾಜಕೀಯ ಪಕ್ಷಗಳು ಜಾತಿಯನ್ನೇ ಅವಲಂಬಿಸಿ ಆ ಜಾತಿಯ ಮುಖಂಡರನ್ನು ಆಯ್ಕೆ ಮಾಡಿ ಚುನಾವಣೆ ಕಣದಲ್ಲಿ ನಿಲ್ಲಿಸುವುದು ನಿಜಕ್ಕೂ ವಿಷ ವರ್ತುಲವಾಗಿದೆ. ವ್ಯವಸ್ಥೆ ಈ ಸೀಳು ಹಾದಿಯಲ್ಲಿ ನಡೆದಿರಬೇಕಾದರೆ, ಜನಸಾಮಾನ್ಯನ ಜ್ವಲಂತ ಸಮಸ್ಸೆಗಳು ಬಗೆಹರಿಯುವುದಂತು ಗಗನ ಕುಸುಮವೇ ಸರಿ. ಜನಪ್ರತಿನಿಧಿಗಳಿಂದ ಯಾವುದೇ ಸಾಮಾಜಿಕ ಕಾರ್ಯುಗಳನ್ನು ಕಾರ್ಯಗತ ಮಾಡುವುದು ಅಷ್ಟೇನು ಸುಲಭದ ಕೆಲಸವಲ್ಲ. ಬಹುತೇಕ ಅಧಿಕಾರಕ್ಕೇರುವ ರಾಜಕಾರಣಿಗಳು ಜನರ ಪ್ರತಿನಿಧಿಗಳೆಂಬುದು ಕನಸಿನ ಮಾತಾಗಿದೆ. ಈ ರಾಷ್ಟ್ರದಲ್ಲಿ ಒಂದು ಸಣ್ಣ ಚುನಾವಣೆಯನ್ನೂ ಸಹ ಎದುರಿಸಬೇಕಾದರೆ ಲಕ್ಷ, ಕೋಟಿಗಟ್ಟಲೆ ಹಣ ಬೇಕು. ಪರಿಸ್ಥಿತಿ ಇಷ್ಟು ಗಂಭೀರವಾಗಿರಬೇಕಾದರೆ, ಈ ರಾಷ್ಟ್ರದಲ್ಲಿ ನ್ಯಾಯಬಧ್ಧ ಹಾಗೂ ಮುಕ್ತ ಚುನಾವಣೆ ನಡೆಯುವುದಂತು ದೂರದ ಮಾತು. ಚುನಾವಣೆ ಬಯಸುವ ಬಹುತೇಕ ಮಂದಿ ಒಂದಲ್ಲ ಒಂದು ರಾಜಕೀಯ ಪಕ್ಷದ ಕೈಗೊಂಬೆಯಾಗಿರುವುದು ಹಿಡಿದ ಕನ್ನಡಿಯಂತಿದೆ. ಅದರಲ್ಲಿಯೂ ಬುದ್ದಿಜೀವಿಗಳೆನಿಸಿಕೊಂಡ ವಿಚಾರವಂತರ ಧೋರಣೆಗಳನ್ನು ಕಂಡರೆ ಖಂಡಿತ ಸಿಡಿಲು ಬಡಿದಂತೆಯೇ ಸರಿ. ಈ ಎಲ್ಲಾ ಅನಿಷ್ಠಗಳಿಗೆ ನಾವೇ ಮುಖ್ಯ ಕಾರಣರಾಗಿದ್ದೇವೆ. ಅದರಲ್ಲಿಯೂ ಸಾಮಾನ್ಯ ಜನರು ಸಮಸ್ಸೆಗಳನ್ನು ವಿರೋಧಿಸಲು ಅಥವಾ ಪ್ರತಿಭಟಿಸಲು ಒಂದಾಗುವುದೇ ಕಷ್ಟ. ಎಲ್ಲರೂ ನಮಗೆ ಯಾಕೆ ಬೇಕು, ನಮಗೆಯಾಕೆ ಬೇಕು ಎಂದು ಕೈಕಟ್ಟಿ ಮೂಕಪ್ರೇಕ್ಷಕರಾಗುವುದೇ ಹೆಚ್ಚು. ಈ ರಾಷ್ಟ್ರದಲ್ಲಿ ಸಂಪೂರ್ಣ ಕ್ರಾಂತಿ ಆಗಬೇಕಾದದ್ದು ಅನಿವಾರ್ಯ. ಇದಕ್ಕೆ ಸೂಕ್ತ ಸಮಯ ಕೂಡಿ ಬರಬೇಕಿದೆ. ಈಗಿನ ಎಲ್ಲಾ ಗೋಸುಂಬೆ ರಾಜಕಾರಣಿಗಳನ್ನು ದೂರವಿಟ್ಟು ಹೊಸ ಅಲೆಗೆ ಬುನಾದಿ ಹಾಕಬೇಕಾಗಿದೆ. ಇಂತಹ ಊಸರವಳ್ಳಿ, ಭ್ರಷ್ಠ ರಾಜಕಾರಣಿಗಳಿಂದ ಸಮಸ್ಸೆಗಳು ಸುಧಾರಿಸುವುದು ಮತ್ತು ನೆಮ್ಮದಿ ಕಾಣುವುದು ದುಃಸಾಧ್ಯ. ಇಷ್ಟಂತು ಸತ್ಯ ಬಡ ರೈತನ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ಮೊಸಳೆ ಕಣ್ಣೀರು ಸುರಿಸುತ್ತಿರುವುದು ನಾಟಕೀಯವಷ್ಟೆ.
No comments:
Post a Comment